Sunday, August 16, 2020

Rudyard Kipling's IF poem Kannada Translation.

TCH ದಿನಗಳಿಂದಲೂ ಬಹುವಾಗಿ ಕಾಡಿದ ಅರ್ಥಗರ್ಭಿತ ರುಡ್ಯಾರ್ಡ್‌ ಕಿಪ್ಲಿಂಗ್‌(Rudyard Kipling)ರ IF ಪದ್ಯದ ಭಾವಾನುವಾದ ಇಂದು ಕನ್ನಡದಲ್ಲಿ ಬರೆಯುಂತಾಯಿತು..ಆ ಕಾಲಕ್ಕೆ ತುಂಬಾ ವಿಶಿಷ್ಟವಾಗಿ,ಪ್ರೇರಣಾದಾಯಕವಾಗಿ ಸಿ.ಜೇ.ಭೂತಣ್ಣನವರು ಬೋಧಿಸಿದ್ದರು.20 ವರ್ಷಗಳಾದರೂ ಇನ್ನೂ ಜೀವಂತವೆನಿಸುವ ತಿರುಳನ್ನು ಪದ್ಯ ಹೊಂದಿದೆ...

ಒಂದುವೇಳೆ...
~~~~~~~~~~~~~~

ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುವಿಯಾದರೆ; ಅವರವರು ತಮ್ಮ ನಿಯಂತ್ರಣ ತಪ್ಪಿ
ನಿನ್ನನ್ನು ತಪ್ಪಿತಸ್ಥನನ್ನಾಗಿಸಿ ನಿನ್ನ ಬಗ್ಗೆ ಏನೇನೋ ಇಲ್ಲಸಲ್ಲದ್ದನ್ನು ದೂಷಿಸುತ್ತ ಹೇಳುತ್ತಿರಲಿ
ನಿನ್ನನ್ನು ನೀನು ನಂಬುವಿಯಾದರೆ; ಯಾರಾದರೂ ನಿನ್ನನ್ನು ಅನುಮಾನಿಸುತ್ತಿರಲಿ
ಅವರು ನಿನ್ನನು ಅನುಮಾನಿಸಲು ನೀನು ಅಂಥವರಿಗೆ ಅವಕಾಶವನ್ನೂ ಕೊಡು-
ನೀನು ತಾಳ್ಮೆಯಿಂದ ಕಾಯುವಿಯಾದರೆ,ಕಾಯುವುದರ ಬಗ್ಗೆ ದಣಿಯದಂತಿದ್ದರೆ
ಸುಳ್ಳಿನ ಇಕ್ಕಟ್ಟಿನಲ್ಲಿ ನಿನ್ನನ್ನು ಸಿಲುಕಿಸಿದ್ದರೆ,ಸುಳ್ಳಿನ ಕಂತೆಯಲ್ಲೇ ಮುಳುಗದಿರು
ದ್ವೇಷಿಸುತ್ತಲೇ ಇದ್ದರೆ; ದ್ವೇಷಕ್ಕೆ ನೀನು ಎಡೆಮಾಡಿಕೊಡದಿರು
ತುಂಬಾ ಒಳ್ಳೆಯವನಾಗದಿರು, ಅತಿ ಬುದ್ಧಿವಂತಿಕೆಯ ಮಾತನ್ನಾಡದಂತಿರು.

ನೀನು ಕನಸುಗಳನ್ನು ಕಾಣುವಂತಿದ್ದರೆ-ನಿನ್ನ ಕನಸುಗಳನ್ನೇ ಗುರುವನ್ನಾಗಿಸದಿರು
ನೀನು ಚಿಂತನೆ ಮಾಡುತ್ತಿದ್ದರೆ-ನಿನ್ನ ವಿಚಾರಗಳನ್ನೇ ಸದಾ ಗುರಿಯಾಗಿಸಿಕೊಳ್ಳದಂತಿರು
ಬದುಕಿನಲ್ಲಿ ಗೆಲುವು ಸೋಲುಗಳನ್ನು ಎದುರಿಸಬೇಕಾದಾಗ
ಅವೆರಡೂ ʼಆಗುಂತಕʼರನ್ನು ಸರಿಸಮಾನವಾಗಿ ಕಾಣುತ್ತಲೇ ಸಾಗು
ಸಹನೆಯಿಂದಲೇ ಕೇಳಲು ಸಿದ್ಧನಿರು, ನೀನು ಹೇಳಿದ್ದನ್ನು ಇನ್ನ್ಯಾರೋ
ಇನ್ನ್ಯಾರ ಮುಂದೋ ತಿರುಚಿ ಇಲ್ಲದ್ದನ್ನು ಹೇಳಿ ಮೂರ್ಖನನ್ನಾಗಿಸುತ್ತಿರುವಾಗ-
ನಿನ್ನ ಬದುಕನ್ನೇ ಒತ್ತೆಯಿಟ್ಟು ಗಳಿಸಿದ್ದನ್ನು,ಯಾರೋ ನಾಶಮಾಡಿದಾಗ ನೋಡಲು
ಸಿದ್ಧನಿರು ಮತ್ತೇ ನಿನ್ನಲ್ಲಿ ಉಳಿದಿರುವ ಚೂರುಪಾರಿನಿಂದಲೇ ಕಟ್ಟಿ ತೋರಿಸಲು.

ನಿನ್ನ ಗೆಲುವನ್ನು, ತಂದು ಕೊಟ್ಟ ಎಲ್ಲ ಕೀರ್ತಿಯ ದಾಖಲೆಗಳನ್ನೆಲ್ಲ ಒಂದೆಡೆ ರಾಶಿ
ಮಾಡುವಿಯಾದರೆ; ಮರುಕ್ಷಣದಲ್ಲೇ ಅವೆಲ್ಲವುಗಳನ್ನು ನೀನು ಕಳೆದುಕೊಳ್ಳುವಿಯಾದರೆ
ಪುನಃ ಪ್ರಾರಂಭಿಸಬೇಕು ನಿನ್ನ ಮೊದಲ ಹೆಜ್ಜೆಯನ್ನು ಇಟ್ಟು ಮತ್ತೆ ಮುಂದಾಗು
ನಿನಗಾದ ನಷ್ಟದ ಬಗ್ಗೆ ಅರೆಕ್ಷಣವೂ ಉಸಿರಬೇಡ ಯಾರಲ್ಲಿಯೂ ಸಾರಬೇಡ
ನಿನ್ನ ಹೃದಯ,ನಿನ್ನ ಮಿದುಳಿನ ನರನಾಡಿಗಳಿಗೆ ನೀನು ಸಾವರಿಸಿ ಒತ್ತಡದಿಂದ ಹೇಳುವಿಯಾದರೆ
ಎಷ್ಟೋ ದೀರ್ಘಕಾಲಿಕದಿಂದ ನಿನ್ನದಾಗಿದ್ದೆಲ್ಲವೂ ಇಂದು ಇಲ್ಲವೆಂದು;
ನಿನಗಾಗಿ ಏನೂ ಇಲ್ಲದಿರುವಾಗ ನಿನ್ನನ್ನು ನೀ ತಾಳಿಕೋ ತಾಳ್ಮೆಯಿಂದಿರು
ನಿನ್ನಲ್ಲಿನ ಅಂತಃಶಕ್ತಿ ನಿನಗೆ ಸದಾ ಹೇಳುತ್ತಲೇ ಇರಲಿ “ಸಹನೆಯಿಂದಿರು”

ಯಾರೊಂದಿಗಾದರೂ ನೀನು ಮಾತನಾಡುತ್ತಿರು; ನಿನ್ನ ಆದರ್ಶದ ಲಕ್ಷ್ಯ ನಿನ್ನಲ್ಲೇ ಇರಲಿ
ಶ್ರೇಷ್ಠ ವ್ಯಕ್ತಿಗಳೊಂದಿಗೇ ನೀನಿದ್ದರೂ;ನಿನ್ನ ಸಾಮಾನ್ಯ ಜನರ ಸಂಪರ್ಕದಿಂದ ದೂರವಾಗದಿರು
ನಿನ್ನ ವೈರಿಗಳು;ನಿನ್ನ ಪ್ರೀತಿಪಾತ್ರರು ನಿನ್ನನ್ನು ನೋಯಿಸದಂತಿದ್ದರೆ
ನಿನ್ನನ್ನು ಎಲ್ಲರೂ ಲೆಕ್ಕಿಸುತ್ತಿದ್ದರೆ;ಯಾರೂ ಅತಿಯಾಗಿ ಲೆಕ್ಕಿಸದಿದ್ದರೆ
ಮರಳಿಬಾರದ ಒಂದು ನಿಮಿಷದ ಸಮಯವನ್ನು ತುಂಬಬಲ್ಲೆಯಾದರೆ
ಅರ್ಥಪೂರ್ಣವಾಗಿ,ಅತ್ಯುಪಯುಕ್ತ ಅರವತ್ತು ಸೆಕೆಂಡುಗಳಿಂದ
ನಿನ್ನದೇ ಈ ಭೂಮಿ.. ನಿನ್ನದೇ ಈ ಜಗತ್ತು..ಇಲ್ಲಿರುವುದೆಲ್ಲವೂ
ಅದಕ್ಕಿಂಥ ಇನ್ನೇನು ಬೇಕು? ನೀನು ʼಬಂಗಾರದಂಥ ಮನುಷ್ಯʼನಾಗಿರುವಾಗ ಮಗನೇ! 

Friday, August 7, 2020

ಹೈಸ್ಕೂಲ್‌ ದಿನಗಳಲ್ಲಿ ಬರೆದದ್ದು ಹಳೆ-ಹೊಸ ಕನ್ನಡದ ಸಮ್ಮಿಶ್ರ ಕವನ..

 

ಓ ಮನುಜ.

~~~~~~~~

ಗಿಡದೆಲೆಗಳು ಉದುರಿಹೋಗಿ ಇಲ್ಲ ಗಿಡದಲ್ಲೊಂದೂ ಎಲೆ

ನಸು-ನಸುಕಿನಲ್ಲೆದ್ದು ನೋಡಿದರೆ ಕಾಕಾಳಿಯೇರಿ

ತರುವಿನ ಮೇಲಿದ್ದ ಕಾಗೆಗಳುಂ ಕಾ..ಕಾss ಎಂದು ಶಬ್ದಮಂ

ಮಾಡುತಿರಲು,ನಿದ್ರಾಭಂಗವಾಯಿತೆಂದು,ಊರ ಜನರೆಲ್ಲ

ಅಲ್ಲಿ ಬಂದು ಸೇರಿ ಶಪಿಸಿ,ಬೈಯ್ದು ತಮ್ಮ ತಮ್ಮ

ಗೃಹಗಳಿಗೆ ಪೋದೊಡೆ,ಕಾಗೆಗಳುಂ ಚಿಂತಿಸುತಿರಲು

ಅಯ್ಯೋ! ಏನಿದು ಮನುಜ ಜಾತಿ, ನಮ್ಮಂಥ

ಕೀಳು ಪಕ್ಷಿಗಳು,ಇಲ್ಲಿ ದಿನ ಬೈಯಿಸಿಕೊಂಡು

ವಾಸಿಸಬಾರದೆಂದು ನಿಶ್ಚಯಿಸಿ,ಚದುರಿತು ಕಾಗೆ

ಗುಂಪು ಕಂಡ ಕಂಡಲ್ಲಿ ಇದನ್ನು ಕಂಡ ಊರ ಜನರು

ಸೋಗಮದಿಂದ ಇರತೊಡಗಿದರು,ಆದರೇನು?

ಎಲ್ಲ ಕಾಗೆಗಳ ವಾಸ ಎಲ್ಲಿರುವವೋ ಏನು?

ಯಾರೂ ಇದರ ಬಗ್ಗೆ ಚಿಂತಿತರಾಗದೆ

ತಮ್ಮ ತಮ್ಮಗಳ ಬಗ್ಗೆ ಚಿಂತಿಸುತಿರಲು

ಪಕ್ಷಿ ದೇವನು-ಪ್ರತ್ಯಕ್ಷನಾಗಿ(ಖಗ ದೇವ)

ಎಲ್ಲದರಲ್ಲೂ ಕರುಣೆ ಇಡು ಅವೇ,ನಿನಗೆ

ದಾರುಣ ಸ್ಥಿತಿಯೊಳ್‌ ನಿಮಗೆ ಒಳ್ಳೆಯದನ್ನು

ಮಾಡುವುದೆಂದೊಡೆ, ಪ್ರತಿಯೊಬ್ಬರಿಗೂ ನೀತಿ

ಸ್ಪರುಶವಾಗಿ ತಮ್ಮ ದುಶ್ಚಟಗಳನ್ನು ಬಿಡಲು

ಮತ್ತೆಂದಿಗೂ ಊರಜನರು ಯಾರಿಗೂ ಕಾಟ ಕೊಡಲಿಲ್ಲ

ತನ್ನೊಬ್ಬನ ಚಿಂತೆಯನ್ನು ಬಿಟ್ಟು ಪರರ

ದುಃಖದಲ್ಲಿಯೂ ಬಾಗಿಯಾಗಬೇಕೆಂದು ನಮ್ಮ ನೀತಿ

ಮಂಜರಿ ಹೇಳುತ್ತದೆ(ತಿಳಿಸುತ್ತದೆ) ಓ ಮನುಜ!

                                      -ಬಿ.ರಾಮಪ್ರಸಾದ ಭಟ್‌, ಹೊಸಪೇಟೆ. (ಪುಟ:-133, ಸ್ನೇಹ ಸಮ್ಮಿಲನ ಕವನ ಸಂಕಲನ.)

Tuesday, August 4, 2020

2020 Poems....

ಅವಳ ಸಾವಿನ ಸುತ್ತ…

~~~~~~~~~~~~~~~

ಅವಳು ಸತ್ತಿದ್ದಳು

ಯಾವೊಂದು ಸುಳಿವಿರದೆ

ಅತ್ತಿದ್ದವು ಮಕ್ಕಳೆರಡು

ಬಿಕ್ಕಿ ಬಿಕ್ಕಿ ಕಾರಣವೇ ತಿಳಿಯದೆ!


ದುಗುಡದ ಮಡುವಿನಲ್ಲಿ

ನರಳುತ್ತಿದ್ದವು ಹತ್ತಾರು

ನಿಜವೆಷ್ಟೋ ಸುಳ್ಳೆಷ್ಟೋ

ಅವಳು ಸತ್ತಿದ್ದಂತೂ ನಿಜ!

 

ಆತುರದ ಸಾವು ಅವಳಿಗೇಕೆ

ಬಂದಿತ್ತೋ? ಹೇಳಲೊಲ್ಲರು-

ಊಹಾ-ಪೋಹಗಳೇ ಅಲ್ಲಿ

ನಾಲಿಗೆಯ ಮೇಲೆ ಹರಿದಾಡುತ್ತಿತ್ತು

 

ಕಟ್ಟಿದ ಕಟ್ಟಿಕೊಂಡ ಟೊಂಕ ಕಟ್ಟಿ

ನಿಂತ ಎಂಟೆದೆ ಭಂಟ ಗಂಡನೋ!

ಎಲ್ಲಿದ್ದನೋ ಏನೋ ಅವನು

ತಿಳಿದಿರಲಿಲ್ಲ ಯಾರಿಗೂ-ಅವ್ನು ಬರುವನೋ?!


ಸಾವಿನ ಆಘಾತವೇ ಹೀಗೆ

ಬಂದು ಬಸವಳಿಸಿಬಿಡುವುದು

ದಿಢೀರನೇ ಸಂತಸದ ಕಳೆಯ ಸರಿಸಿ

ತಿಳಿಯದೇ ಮೇಳೈಸಿ ಬಿಡುವುದು.

 

ಯಾರೂ ಏನನೂ ಮಾಡಲಾರರು

ಸಾವೆಂಬುದು ಶತಸಿದ್ಧವಾಗಿ ಬಂದಾಗ

ಮಾಡುವುದಕ್ಕಾದರೂ ಏನೂ

ಉಳಿದಿರುವುದಿಲ್ಲ ಯಾರ ಕೈಯಲ್ಲೂ!

 

--ಬಿ.ರಾಮಪ್ರಸಾದ ಭಟ್‌ ಹೊಸಪೇಟೆ.

17:02- ದಿನಾಂಕ:- 02-08-2020.